WELCOME !

WELCOME ! No images or posts on this blog may be copied or reproduced without owners permission.

Sunday, September 14, 2014

Tuesday, January 1, 2013

ಆ ದುರ್ಘಟನೆಯೊಂದು ಆಗದೇ ಹೋಗಿದ್ದರೆ ? …

ಜೀವನದಲ್ಲಿ ಕೆಲ (ದುರ್)ಘಟನೆಗಳು ಕೆಲವೊಮ್ಮೆ ನಡೆದೇ ತೀರಬೇಕೇನೋ !! :(  ... ಇನ್ನಾದರೂ ಎಚ್ಚೆತ್ತುಕೊಳ್ಳೋಣ ... ಅಕಾಲಿಕ ಹಾಗೂ ಅಮಾನವೀಯ ರೀತಿಯಲ್ಲಿ ಮರಣ ಹೊಂದಿದ ದೆಹಲಿಯ ಆ ಯುವತಿಗೆ ಭಾವಪೂರ್ಣ ಶ್ರದ್ಧಾಂಜಲಿ...


Tuesday, January 11, 2011

ಚಳೀಗಾಲ ಅಂದ್ರೆ ಮೈ ಕಾಯಿಸೋದೇ ದೊಡ್ಡ ಕೆಲಸ !

ಈ ಪಾಟಿ ಚಳಿನಾ ನಾನು ಎಂದೂ ಕಂಡಿರಲ್ಲಿಲ್ಲ. ಅಮೇರಿಕಾದ ಬಹಳಷ್ಟು ಕಡೆಗಳಲ್ಲಿ ಆಗೋ ಹಾಗೆ ಹಿಮಪಾತ ಏನೂ ಇಲ್ಲಿ  (ನಾನು ಸದ್ಯಕ್ಕೆ ನೆಲಸಿರುವ ಕ್ಯಾಲಿಫೋರ್ನಿಯಾದ ಸನ್ನೀವೇಲ್ನಲ್ಲಿ ) ಇಲ್ಲ..ಆದ್ರೂ ೪-೫ ಡಿಗ್ರೀ ತಾಪಮಾನಕ್ಕೆ  ಕೊರತೆ ಏನೂ ಇಲ್ಲ. ಅಷ್ಟೇ ಅಲ್ಲ ಬೆಳಗ್ಗೆ ೯-೧೦ ಗಂಟೆಗೆ ಸದ್ಯ ಬೆಳಕಾಯ್ತು ಅನ್ನೋ ಅಷ್ಟರಲ್ಲಿ ಕತ್ತಲೇ ಆಗೊಕ್ಕೇ ಶುರು ಆಗ್ಬಿಟ್ಟಿರತ್ತೆ. ಸಂಜೆ ೪ ಕ್ಕೆ ಹೊರಗೆ ಬಂದು ನೋಡಿದರೆ ರಾತ್ರಿ ೮-೯ ಗಂಟೆಯಾಗಿದೆಯೇನೋ ಅನ್ನೋ ಅನುಭವ. ಈ ಚಳಿಯ ಜೊತೆಗೆ ಮಳೆರಾಯನ ಅಬ್ಬರಾನೂ ಕೆಲವೊಮ್ಮೆ ಇರತ್ತೆ .... ಆಗ ಅದು ನಮ್ಮ ಚಿತ್ರರಂಗದ ಭಾಷೆಯಲ್ಲಿ ಹೇಳಬೇಕು ಅಂದ್ರೆ ಡೆಡ್ಲೀ ಕಾಂಬಿನೇಶನ್ !!  ಇಂತಹ ಸಮಯದಲ್ಲೇ ಇಲ್ಲಿ ಜನ ಗುಂಡು ಹಾಕೋ , ದಮ್ಮು ಎಳೆಯೋ ಗ್ರಾಫ್ ಗಳು ಸುಯ್ಯೇಂದು ಮೇಲಕ್ಕೆ ಹೊಂಟೋಗೋದು.ಇವೆರಡರ ಸಹವಾಸವಿಲ್ಲದ ನಮ್ಮಂತಹ ಒಂಟಿ ಪಿಶಾಚಿಗಳು ಬಿಸಿ ಬಿಸಿ ಚಹಾ ಹೀರ್ಕೋಬೇಕು ಅಷ್ಟೇ !

ಈ ದೇಶದಲ್ಲಿ ಮೊದಲೇ ಜನ ಕಮ್ಮಿ [ ನಮ್ಮ್ ದೇಶಕ್ಕಿಂತಮೂರುಪಟ್ಟು ವಿಸ್ತಾರವಾಗಿದ್ದರೂ , ಜನಸಂಖ್ಯೆ ನಮ್ಮ ೧/೩ ಭಾಗದಷ್ಟು !, ಹಾಗಾಗಿ ಭಾರತೀಯರು ಇಲ್ಲಿ ಜನರನ್ನ ಮಿಸ್ ಮಾಡ್ಕೊಂಡ್ರೆ ಆಶ್ಚರ್ಯ ಏನು ಇಲ್ಲ ಬಿಡಿ. ] ಇನ್ನು ಚಳಿಗಾಲ ಅಂದ್ರೆ ಆ ಇರೋ ಜನಾನೂ ಹೊರಕ್ಕೆ ಬರೋಲ್ಲ... ರಸ್ತೆಗಳು, ಅಂಗಡಿಗಳು, ಆಫೀಸುಗಳು, ಆಟದ ಮೈದಾನಗಳು, ಶಾಪಿಂಗ್ ಮಾಲುಗಳು, ಸಿನಿಮಾ ಥಿಯೇಟರ್ಗಳು, ದೇವಸ್ಥಾನಗಳು, ಹೋಟೆಲ್‍ಗಳು, ಪ್ರವಾಸೀ ತಾಣಗಳು, ಬಸ್ ತಂಗುದಾಣಗಳು ಒಟ್ಟ್ನಲ್ಲಿ ಎಲ್ಲಾ ...... ಬಿಕೋ ಬಿಕೋಗಳು !

ಹಾಗಾದ್ರೆ ಮನೇಲಿ ಕುಂತಕೊಂಡು ಜನ ಎನ್ ಮಾಡ್ತಾರೆ ?  ವರ್ಕ್ ಫ್ರಮ್ ಹೋಮ್ ಭಾರ ಇರೋ ಅಲ್ಪ ಸ್ವಲ್ಪ ಜನರಲ್ಲಿ ಸ್ವಲ್ಪ ಜನ ಅಷ್ಟು ಇಷ್ಟು ಕೆಲಸ ಮಾಡ್ತಾರೆ, ಬಿಸಿ ಬಿಸಿ ಅಡಿಗೆ ಮಾಡ್ಕೋತಾರೆ, ಚಹಾ/ಕಾಫಿ ಕುಡೀತಾರೆ, ಟಿವಿ ನೋಡ್ತಾರೆ, ಮೂವೀಸ್ ದಿನಕ್ಕೆ ಒಂದೋ ಎರಡೋ, ಗುಂಡು ಮತ್ತು / ಅಥವಾ ದಮ್ಮಿನ ಆರಾಧಕರಿಗೆ ಟೈಮ್ ಪಾಸ್ನ ಚಿಂತೆ ಅಷ್ಟು ಇರೋದಿಲ್ಲ, ಕುಟುಂಬದವರ ಜೊತೆ ಕಾಲ ಕಳೆಯೋಕ್ಕೆ ತುಂಬಾ ಸಮಯ ಸಿಗತ್ತೆ [ ಜೊತೆಗಿದ್ದರೆ ....ಇಲ್ಲಾಂದ್ರೆ ಕರ್ಮ !] ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ಹೀಟರ್ ನ ಮುಂದೆ ಕೂತ್ಕೊಂಡು ಕೈ ಉಜ್ಜಿಕೊಳ್ಳೋದು, ಮೈ ಬೆಚ್ಚಗೆ ಮಾಡಿಕೊಳ್ಳೋದು, ಮುದರಿ ಮುದರಿ ಕೂತ್ಕೊಳ್ಳೋದು, ಬೆಚ್ಚನೆ ಹೊದ್ದು ಮಲಗೋದು ದಿನ ಪೂರ್ತಿ ನಡೀತಾನೆ ಇರತ್ತೆ .


ಅದಕ್ಕೇ ಹೇಳಿದ್ದು "ಚಳೀಗಾಲ ಅಂದ್ರೆ ಮೈ ಕಾಯಿಸೋದೇ ದೊಡ್ಡ ಕೆಲಸ !" ಒಪ್‌ಕೋತೀರಾ ?
Pic from : Google images

Friday, November 5, 2010

ನಮ್ಮ ಕನ್ನಡಾನ ನಾವೇ ಬಿಟ್ರೆ ??

"ಕನ್ನಡದಲ್ಲಿ ಏನಾದ್ರೂ ಓದಿ ತುಂಬಾ ವರ್ಷ ಆಯ್ತು", "ಅದ್ ಹೇಗೋ ಕನ್ನಡದಲ್ಲಿ ಇಗ್ಲೂ ಬರೀತೀಯ ?" , "ಕರ್ನಾಟಕದಲ್ಲಿ ಇದ್ರೆ ಏನಂತೆ ? ಸಿಬಿಎಸ್ಸಿ ಅಂದ್ರೆ ಮುಗೀತು ಕನ್ನಡ ಕಲೀಲೆ ಬೇಕು ಅಂತ ಏನಿಲ್ಲ !" , " ಕನ್ನಡ ಓದೋದು , ಬರೆಯೋದು ಹಾಗಿರಲಿ ಸದ್ಯ ನನ್ ಮಗ ಅಲ್ಪ ಸ್ವಲ್ಪ ಆದ್ರೂ ಕನ್ನಡದಲ್ಲಿ ಮಾತಾಡಿದ್ರೆ ಸಾಕು" ..... ಹೀಗೆ ( ಕೆಲ/ಹಲ ವು) ಕನ್ನಡಿಗರ ಕನ್ನಡದ ಹಣೆಬರಹವನ್ನು, ಪಕ್ಕಾ ಕನ್ನಡಿಗ ಪೋಷಕರಿಗೀರೋ ಕನ್ನಡ ಕಾಳಜಿಯನ್ನೂ , ಕನ್ನಡ ಯಾಕೆ ಬೇಕು ಅನ್ನೋ ಅಸಡ್ಡೆಯನ್ನೂ ನೋಡಿ,ಕೇಳಿ ನನಗೆ ಸಾಕಾಗಿಹೋಗಿದೆ .... ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸೋದು ಹಾಗಿರಲಿ ಕನಿಷ್ಟ ಕನ್ನಡವನ್ನು ಅವರು ಒಂದು ವಿಷಯವನ್ನಾಗಿಯಾದರೂ ಓದಲಿ ಅನ್ನೋ ಕಳಕಳಿ ಇಲ್ಲದೇ ಇರೋದನ್ನು ನೋಡಿದಾಗ ನಾಚಿಕೆಯಾಗುತ್ತೆ, ಬೇಜಾರಾಗುತ್ತೆ, ಕೋಪವೂ ಧಂಡಿಯಾಗಿ ಉಕ್ಕಿ ಬರತ್ತೆ !

ಒಂದ್ ಪ್ರಶ್ನೆ ನನ್ನನ್ನು ಬಹಳ ಕಾಡ್ತಾ ಇದೆ. ಅಲ್ಲ ನಮ್ ಕನ್ನಡಿಗರಿಗೆ ... 'ಕನ್ನಡ'  ಕಾಟಚಾರವಾದದ್ದು ಯಾವಾಗ ? ನಮ್ಮನ್ನು ಬೆಳಸಿದ ಭಾಷೆಯೇ ನಮಗೆ ಹೊರೆಯಾದದ್ದು ಯಾವಾಗ ?  "ಸ್ವಲ್ಪ ಅಡ್ಜಸ್ಟ್ ಮಾಡ್‌ಕೊಳ್ಳಿ" ಇದ್ದದ್ದು "ತುಂಬಾ ಅಡ್ಜಸ್ಟ್‌ಮೆಂಟ್" ಆಗ್ ಹೋಗಿದೆಯಲ್ಲಾ !  "ಕನ್ನಡಾನ ನಂಬ್ಕೊಂಡ್ರೆ ಬದ್ಕೊಕ್ಕೇ ಆಗುತ್ತಾ" ಅನ್ನೋವ್ರಿಗೆ  ನನ್ನ ಸಹಾನುಭೂತಿ ಬಿಟ್ರೆ ಬೇರೇನನ್ನೂ ಕೊಡಲಾರೆ. ಯಾಕಂದ್ರೆ ಬುದ್ಧಿ ಮಾತು ಹೇಳೋ ಅಷ್ಟು ದೊಡ್ಡೋವ್ನ್ ಅಲ್ಲ ನಾನು! ಅಥವಾ ನಾಲ್ಕು ಮಾತು ಹೇಳಿದ್ರೆ ಜನ ಬದಲಾಗಿಬಿಡ್ತಾರೆ ಅನ್ನೋ ಭರವಸೆಯನ್ನೂ ಇಟ್ಟ್ಕೊನ್ಡಿಲ್ಲ ನಾನು. ಬಲವಂತವಾಗಿ ಕನ್ನಡ ಹೇರೋದೂ ನನ್ನ ಮೊದಲ ಪ್ರಾಶಸ್ತ್ಯ ಅಲ್ಲ ! ಆತ್ಮ ಸಾಕ್ಷಿ ಇರೋ ಪ್ರತಿಯೊಬ್ಬ ಕನ್ನಡಿಗನೂ, ಕನ್ನಡದ ನೆಲದಲ್ಲಿರೋ ಕನ್ನಡೇತರರೂ ತಾವಾಗಿ ಮುಂದೆ ಬಂದು ಕನ್ನಡವನ್ನು ಬಳಸಿ, ಬೆಳಸಿ, ಪೋಷಿಸಬೇಕೆಂಬುದು ನನ್ನಾಸೆ !


ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳಿರಬೇಕು ಅಂತ ಕಾನೂನು (ಅಷ್ಟಕ್ಕೂ ಬೇರೆ ಭಾಷೆ ಬೇಡ ಅಂತ ಕಾನೂನು ಹೇಳೋಲ್ಲ...ಕನ್ನಡಕ್ಕೆ ಪ್ರಾಶಸ್ತ್ಯ ಕೊಡಿ ಅನತ್ತೆ ಅಷ್ಟೇ! )  ಇದ್ದರೂ ಅದಕ್ಕೆ ಕ್ಯಾರೇ ಅನ್ನದ, ಅದೇನ್ ಮಾಡ್ತೀರೋ ನೋಡೋಣ ಅನ್ನೋ ಕೆಲ ಜನರ ಭಂಡತನಕ್ಕೆ ಏನನ್ನೋಣ ? ಕನ್ನಡಿಗರಿಬ್ಬರ ನಡುವೆ ಇಂಗ್ಲೀಷ್ ಮಾತುಕತೆಯ ಭಾಷೆಯಾಗಿ ಬಳಕೆಯಾಗ್ತಾ ಇದ್ರೆ..ಅದು ಕನ್ನಡದ ಕೊಲೆಯೇ ಅಲ್ಲವೇ ? ನಮ್ಮ ಬೆಂಗಳೂರಿನ ಮಾಲ್, ಚಿತ್ರಮಂದಿರ, ವಿಮಾನ ನಿಲ್ದಾಣ, ಬ್ರಿಗೇಡ್, ಎಂಜೀ ರಸ್ತೆಗಳಲ್ಲಿ ಕನ್ನಡ ಬಳಸೋಕ್ಕೆ ಏಕಾಏಕಿ ಸಂಕೋಚ ಯಾತಕ್ಕೆ ?? ಹಳೆಗನ್ನಡ ಎಂಬುದು ನಮ್ಮ ತಂದೆ ತಾಯಿಗಳ ಕಾಲಕ್ಕೇ ಹೊರಟು ಹೋಗಿತ್ತು..ಬದುಕಿ ಉಳಿದಿರೋ.... ಈಗಿರೋ ಕನ್ನಡವನ್ನಾದ್ರೂ ನಮ್ಮಿಂದ ಹೆಚ್ಚಾಗಿ ಬಳಸೋಕ್ಕೆ ಆಗೋಲ್ವೇ ?? ಹಾಗೆ ನೋಡಿದ್ರೆ ಕನ್ನಡಿಗರು ಪರಭಾಷಾ ವಿರೋಧಿಗಳಲ್ಲ, ಕಾಲು ಕೆರೆದುಕೊಂಡು ಸುಮ್ಮನೇ ಕ್ಯಾತೇ ತೆಗೆಯುವವರೂ ಅಲ್ಲ, ಹಿಂಸೆ, ಪ್ರತಿಭಟನೆಗಳ ಆರಾಧಕರೂ ಅಲ್ಲ ... ಹಾಗಿರಬೇಕಾದ್ರೆ ಕನ್ನಡ, ಕನ್ನಡತನದಿಂದ ನಾವೇಕೆ ದೂರ ಸರೀತಾ ಇದ್ದೀವಿ ?? 

ನಮ್ಮ ಕಣ್ಣ ಮುಂದೇನೇ ಶ್ರೀಮಂತ ಹಾಗೂ ಹಲವಾರು ಭಾಷೆಗಳಿಗೆ ಮೂಲವಾದ ಸಂಸ್ಕೃತಕ್ಕೆ ಬಂದಿರೋ ಸ್ಥಿತಿನಾ ನೋಡ್ತಾ ಇದ್ದೀವಿ ....ನಮ್ಮ ಕನ್ನಡಾನೂ ಹಾಗೆ ಆಗಬಾರದು ಅಂದ್ರೆ ರಾಜ್ಯೋತ್ಸವ ಅನ್ನೋದು ನವೆಂಬರ್ ಮಾಸಕ್ಕೆ ಸೀಮಿತವಾಗದೆ, ಕನ್ನಡ ಬಳಕೆ, ಕನ್ನಡದ ಬಗೆಗಿನ ಕಾಳಜಿಯ ಮೂಲಕ ನಿತ್ಯೋತ್ಸವ ಆಗಬೇಕು...ಆಗಲೇ ನಮ್ಮ ಕನ್ನಡ ಉಳಿದೀತೂ, ಕೊಂಚ ಬೆಳೆದೀತೂ... ! 

ಒಪ್ಪ್ಕೋತೀರಾ ??