WELCOME !

WELCOME ! No images or posts on this blog may be copied or reproduced without owners permission.

Tuesday, January 1, 2013

ಆ ದುರ್ಘಟನೆಯೊಂದು ಆಗದೇ ಹೋಗಿದ್ದರೆ ? …

ಜೀವನದಲ್ಲಿ ಕೆಲ (ದುರ್)ಘಟನೆಗಳು ಕೆಲವೊಮ್ಮೆ ನಡೆದೇ ತೀರಬೇಕೇನೋ !! :(  ... ಇನ್ನಾದರೂ ಎಚ್ಚೆತ್ತುಕೊಳ್ಳೋಣ ... ಅಕಾಲಿಕ ಹಾಗೂ ಅಮಾನವೀಯ ರೀತಿಯಲ್ಲಿ ಮರಣ ಹೊಂದಿದ ದೆಹಲಿಯ ಆ ಯುವತಿಗೆ ಭಾವಪೂರ್ಣ ಶ್ರದ್ಧಾಂಜಲಿ...


Tuesday, January 11, 2011

ಚಳೀಗಾಲ ಅಂದ್ರೆ ಮೈ ಕಾಯಿಸೋದೇ ದೊಡ್ಡ ಕೆಲಸ !

ಈ ಪಾಟಿ ಚಳಿನಾ ನಾನು ಎಂದೂ ಕಂಡಿರಲ್ಲಿಲ್ಲ. ಅಮೇರಿಕಾದ ಬಹಳಷ್ಟು ಕಡೆಗಳಲ್ಲಿ ಆಗೋ ಹಾಗೆ ಹಿಮಪಾತ ಏನೂ ಇಲ್ಲಿ  (ನಾನು ಸದ್ಯಕ್ಕೆ ನೆಲಸಿರುವ ಕ್ಯಾಲಿಫೋರ್ನಿಯಾದ ಸನ್ನೀವೇಲ್ನಲ್ಲಿ ) ಇಲ್ಲ..ಆದ್ರೂ ೪-೫ ಡಿಗ್ರೀ ತಾಪಮಾನಕ್ಕೆ  ಕೊರತೆ ಏನೂ ಇಲ್ಲ. ಅಷ್ಟೇ ಅಲ್ಲ ಬೆಳಗ್ಗೆ ೯-೧೦ ಗಂಟೆಗೆ ಸದ್ಯ ಬೆಳಕಾಯ್ತು ಅನ್ನೋ ಅಷ್ಟರಲ್ಲಿ ಕತ್ತಲೇ ಆಗೊಕ್ಕೇ ಶುರು ಆಗ್ಬಿಟ್ಟಿರತ್ತೆ. ಸಂಜೆ ೪ ಕ್ಕೆ ಹೊರಗೆ ಬಂದು ನೋಡಿದರೆ ರಾತ್ರಿ ೮-೯ ಗಂಟೆಯಾಗಿದೆಯೇನೋ ಅನ್ನೋ ಅನುಭವ. ಈ ಚಳಿಯ ಜೊತೆಗೆ ಮಳೆರಾಯನ ಅಬ್ಬರಾನೂ ಕೆಲವೊಮ್ಮೆ ಇರತ್ತೆ .... ಆಗ ಅದು ನಮ್ಮ ಚಿತ್ರರಂಗದ ಭಾಷೆಯಲ್ಲಿ ಹೇಳಬೇಕು ಅಂದ್ರೆ ಡೆಡ್ಲೀ ಕಾಂಬಿನೇಶನ್ !!  ಇಂತಹ ಸಮಯದಲ್ಲೇ ಇಲ್ಲಿ ಜನ ಗುಂಡು ಹಾಕೋ , ದಮ್ಮು ಎಳೆಯೋ ಗ್ರಾಫ್ ಗಳು ಸುಯ್ಯೇಂದು ಮೇಲಕ್ಕೆ ಹೊಂಟೋಗೋದು.ಇವೆರಡರ ಸಹವಾಸವಿಲ್ಲದ ನಮ್ಮಂತಹ ಒಂಟಿ ಪಿಶಾಚಿಗಳು ಬಿಸಿ ಬಿಸಿ ಚಹಾ ಹೀರ್ಕೋಬೇಕು ಅಷ್ಟೇ !

ಈ ದೇಶದಲ್ಲಿ ಮೊದಲೇ ಜನ ಕಮ್ಮಿ [ ನಮ್ಮ್ ದೇಶಕ್ಕಿಂತಮೂರುಪಟ್ಟು ವಿಸ್ತಾರವಾಗಿದ್ದರೂ , ಜನಸಂಖ್ಯೆ ನಮ್ಮ ೧/೩ ಭಾಗದಷ್ಟು !, ಹಾಗಾಗಿ ಭಾರತೀಯರು ಇಲ್ಲಿ ಜನರನ್ನ ಮಿಸ್ ಮಾಡ್ಕೊಂಡ್ರೆ ಆಶ್ಚರ್ಯ ಏನು ಇಲ್ಲ ಬಿಡಿ. ] ಇನ್ನು ಚಳಿಗಾಲ ಅಂದ್ರೆ ಆ ಇರೋ ಜನಾನೂ ಹೊರಕ್ಕೆ ಬರೋಲ್ಲ... ರಸ್ತೆಗಳು, ಅಂಗಡಿಗಳು, ಆಫೀಸುಗಳು, ಆಟದ ಮೈದಾನಗಳು, ಶಾಪಿಂಗ್ ಮಾಲುಗಳು, ಸಿನಿಮಾ ಥಿಯೇಟರ್ಗಳು, ದೇವಸ್ಥಾನಗಳು, ಹೋಟೆಲ್‍ಗಳು, ಪ್ರವಾಸೀ ತಾಣಗಳು, ಬಸ್ ತಂಗುದಾಣಗಳು ಒಟ್ಟ್ನಲ್ಲಿ ಎಲ್ಲಾ ...... ಬಿಕೋ ಬಿಕೋಗಳು !

ಹಾಗಾದ್ರೆ ಮನೇಲಿ ಕುಂತಕೊಂಡು ಜನ ಎನ್ ಮಾಡ್ತಾರೆ ?  ವರ್ಕ್ ಫ್ರಮ್ ಹೋಮ್ ಭಾರ ಇರೋ ಅಲ್ಪ ಸ್ವಲ್ಪ ಜನರಲ್ಲಿ ಸ್ವಲ್ಪ ಜನ ಅಷ್ಟು ಇಷ್ಟು ಕೆಲಸ ಮಾಡ್ತಾರೆ, ಬಿಸಿ ಬಿಸಿ ಅಡಿಗೆ ಮಾಡ್ಕೋತಾರೆ, ಚಹಾ/ಕಾಫಿ ಕುಡೀತಾರೆ, ಟಿವಿ ನೋಡ್ತಾರೆ, ಮೂವೀಸ್ ದಿನಕ್ಕೆ ಒಂದೋ ಎರಡೋ, ಗುಂಡು ಮತ್ತು / ಅಥವಾ ದಮ್ಮಿನ ಆರಾಧಕರಿಗೆ ಟೈಮ್ ಪಾಸ್ನ ಚಿಂತೆ ಅಷ್ಟು ಇರೋದಿಲ್ಲ, ಕುಟುಂಬದವರ ಜೊತೆ ಕಾಲ ಕಳೆಯೋಕ್ಕೆ ತುಂಬಾ ಸಮಯ ಸಿಗತ್ತೆ [ ಜೊತೆಗಿದ್ದರೆ ....ಇಲ್ಲಾಂದ್ರೆ ಕರ್ಮ !] ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ಹೀಟರ್ ನ ಮುಂದೆ ಕೂತ್ಕೊಂಡು ಕೈ ಉಜ್ಜಿಕೊಳ್ಳೋದು, ಮೈ ಬೆಚ್ಚಗೆ ಮಾಡಿಕೊಳ್ಳೋದು, ಮುದರಿ ಮುದರಿ ಕೂತ್ಕೊಳ್ಳೋದು, ಬೆಚ್ಚನೆ ಹೊದ್ದು ಮಲಗೋದು ದಿನ ಪೂರ್ತಿ ನಡೀತಾನೆ ಇರತ್ತೆ .


ಅದಕ್ಕೇ ಹೇಳಿದ್ದು "ಚಳೀಗಾಲ ಅಂದ್ರೆ ಮೈ ಕಾಯಿಸೋದೇ ದೊಡ್ಡ ಕೆಲಸ !" ಒಪ್‌ಕೋತೀರಾ ?
Pic from : Google images

Friday, November 5, 2010

ನಮ್ಮ ಕನ್ನಡಾನ ನಾವೇ ಬಿಟ್ರೆ ??

"ಕನ್ನಡದಲ್ಲಿ ಏನಾದ್ರೂ ಓದಿ ತುಂಬಾ ವರ್ಷ ಆಯ್ತು", "ಅದ್ ಹೇಗೋ ಕನ್ನಡದಲ್ಲಿ ಇಗ್ಲೂ ಬರೀತೀಯ ?" , "ಕರ್ನಾಟಕದಲ್ಲಿ ಇದ್ರೆ ಏನಂತೆ ? ಸಿಬಿಎಸ್ಸಿ ಅಂದ್ರೆ ಮುಗೀತು ಕನ್ನಡ ಕಲೀಲೆ ಬೇಕು ಅಂತ ಏನಿಲ್ಲ !" , " ಕನ್ನಡ ಓದೋದು , ಬರೆಯೋದು ಹಾಗಿರಲಿ ಸದ್ಯ ನನ್ ಮಗ ಅಲ್ಪ ಸ್ವಲ್ಪ ಆದ್ರೂ ಕನ್ನಡದಲ್ಲಿ ಮಾತಾಡಿದ್ರೆ ಸಾಕು" ..... ಹೀಗೆ ( ಕೆಲ/ಹಲ ವು) ಕನ್ನಡಿಗರ ಕನ್ನಡದ ಹಣೆಬರಹವನ್ನು, ಪಕ್ಕಾ ಕನ್ನಡಿಗ ಪೋಷಕರಿಗೀರೋ ಕನ್ನಡ ಕಾಳಜಿಯನ್ನೂ , ಕನ್ನಡ ಯಾಕೆ ಬೇಕು ಅನ್ನೋ ಅಸಡ್ಡೆಯನ್ನೂ ನೋಡಿ,ಕೇಳಿ ನನಗೆ ಸಾಕಾಗಿಹೋಗಿದೆ .... ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸೋದು ಹಾಗಿರಲಿ ಕನಿಷ್ಟ ಕನ್ನಡವನ್ನು ಅವರು ಒಂದು ವಿಷಯವನ್ನಾಗಿಯಾದರೂ ಓದಲಿ ಅನ್ನೋ ಕಳಕಳಿ ಇಲ್ಲದೇ ಇರೋದನ್ನು ನೋಡಿದಾಗ ನಾಚಿಕೆಯಾಗುತ್ತೆ, ಬೇಜಾರಾಗುತ್ತೆ, ಕೋಪವೂ ಧಂಡಿಯಾಗಿ ಉಕ್ಕಿ ಬರತ್ತೆ !

ಒಂದ್ ಪ್ರಶ್ನೆ ನನ್ನನ್ನು ಬಹಳ ಕಾಡ್ತಾ ಇದೆ. ಅಲ್ಲ ನಮ್ ಕನ್ನಡಿಗರಿಗೆ ... 'ಕನ್ನಡ'  ಕಾಟಚಾರವಾದದ್ದು ಯಾವಾಗ ? ನಮ್ಮನ್ನು ಬೆಳಸಿದ ಭಾಷೆಯೇ ನಮಗೆ ಹೊರೆಯಾದದ್ದು ಯಾವಾಗ ?  "ಸ್ವಲ್ಪ ಅಡ್ಜಸ್ಟ್ ಮಾಡ್‌ಕೊಳ್ಳಿ" ಇದ್ದದ್ದು "ತುಂಬಾ ಅಡ್ಜಸ್ಟ್‌ಮೆಂಟ್" ಆಗ್ ಹೋಗಿದೆಯಲ್ಲಾ !  "ಕನ್ನಡಾನ ನಂಬ್ಕೊಂಡ್ರೆ ಬದ್ಕೊಕ್ಕೇ ಆಗುತ್ತಾ" ಅನ್ನೋವ್ರಿಗೆ  ನನ್ನ ಸಹಾನುಭೂತಿ ಬಿಟ್ರೆ ಬೇರೇನನ್ನೂ ಕೊಡಲಾರೆ. ಯಾಕಂದ್ರೆ ಬುದ್ಧಿ ಮಾತು ಹೇಳೋ ಅಷ್ಟು ದೊಡ್ಡೋವ್ನ್ ಅಲ್ಲ ನಾನು! ಅಥವಾ ನಾಲ್ಕು ಮಾತು ಹೇಳಿದ್ರೆ ಜನ ಬದಲಾಗಿಬಿಡ್ತಾರೆ ಅನ್ನೋ ಭರವಸೆಯನ್ನೂ ಇಟ್ಟ್ಕೊನ್ಡಿಲ್ಲ ನಾನು. ಬಲವಂತವಾಗಿ ಕನ್ನಡ ಹೇರೋದೂ ನನ್ನ ಮೊದಲ ಪ್ರಾಶಸ್ತ್ಯ ಅಲ್ಲ ! ಆತ್ಮ ಸಾಕ್ಷಿ ಇರೋ ಪ್ರತಿಯೊಬ್ಬ ಕನ್ನಡಿಗನೂ, ಕನ್ನಡದ ನೆಲದಲ್ಲಿರೋ ಕನ್ನಡೇತರರೂ ತಾವಾಗಿ ಮುಂದೆ ಬಂದು ಕನ್ನಡವನ್ನು ಬಳಸಿ, ಬೆಳಸಿ, ಪೋಷಿಸಬೇಕೆಂಬುದು ನನ್ನಾಸೆ !


ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳಿರಬೇಕು ಅಂತ ಕಾನೂನು (ಅಷ್ಟಕ್ಕೂ ಬೇರೆ ಭಾಷೆ ಬೇಡ ಅಂತ ಕಾನೂನು ಹೇಳೋಲ್ಲ...ಕನ್ನಡಕ್ಕೆ ಪ್ರಾಶಸ್ತ್ಯ ಕೊಡಿ ಅನತ್ತೆ ಅಷ್ಟೇ! )  ಇದ್ದರೂ ಅದಕ್ಕೆ ಕ್ಯಾರೇ ಅನ್ನದ, ಅದೇನ್ ಮಾಡ್ತೀರೋ ನೋಡೋಣ ಅನ್ನೋ ಕೆಲ ಜನರ ಭಂಡತನಕ್ಕೆ ಏನನ್ನೋಣ ? ಕನ್ನಡಿಗರಿಬ್ಬರ ನಡುವೆ ಇಂಗ್ಲೀಷ್ ಮಾತುಕತೆಯ ಭಾಷೆಯಾಗಿ ಬಳಕೆಯಾಗ್ತಾ ಇದ್ರೆ..ಅದು ಕನ್ನಡದ ಕೊಲೆಯೇ ಅಲ್ಲವೇ ? ನಮ್ಮ ಬೆಂಗಳೂರಿನ ಮಾಲ್, ಚಿತ್ರಮಂದಿರ, ವಿಮಾನ ನಿಲ್ದಾಣ, ಬ್ರಿಗೇಡ್, ಎಂಜೀ ರಸ್ತೆಗಳಲ್ಲಿ ಕನ್ನಡ ಬಳಸೋಕ್ಕೆ ಏಕಾಏಕಿ ಸಂಕೋಚ ಯಾತಕ್ಕೆ ?? ಹಳೆಗನ್ನಡ ಎಂಬುದು ನಮ್ಮ ತಂದೆ ತಾಯಿಗಳ ಕಾಲಕ್ಕೇ ಹೊರಟು ಹೋಗಿತ್ತು..ಬದುಕಿ ಉಳಿದಿರೋ.... ಈಗಿರೋ ಕನ್ನಡವನ್ನಾದ್ರೂ ನಮ್ಮಿಂದ ಹೆಚ್ಚಾಗಿ ಬಳಸೋಕ್ಕೆ ಆಗೋಲ್ವೇ ?? ಹಾಗೆ ನೋಡಿದ್ರೆ ಕನ್ನಡಿಗರು ಪರಭಾಷಾ ವಿರೋಧಿಗಳಲ್ಲ, ಕಾಲು ಕೆರೆದುಕೊಂಡು ಸುಮ್ಮನೇ ಕ್ಯಾತೇ ತೆಗೆಯುವವರೂ ಅಲ್ಲ, ಹಿಂಸೆ, ಪ್ರತಿಭಟನೆಗಳ ಆರಾಧಕರೂ ಅಲ್ಲ ... ಹಾಗಿರಬೇಕಾದ್ರೆ ಕನ್ನಡ, ಕನ್ನಡತನದಿಂದ ನಾವೇಕೆ ದೂರ ಸರೀತಾ ಇದ್ದೀವಿ ?? 

ನಮ್ಮ ಕಣ್ಣ ಮುಂದೇನೇ ಶ್ರೀಮಂತ ಹಾಗೂ ಹಲವಾರು ಭಾಷೆಗಳಿಗೆ ಮೂಲವಾದ ಸಂಸ್ಕೃತಕ್ಕೆ ಬಂದಿರೋ ಸ್ಥಿತಿನಾ ನೋಡ್ತಾ ಇದ್ದೀವಿ ....ನಮ್ಮ ಕನ್ನಡಾನೂ ಹಾಗೆ ಆಗಬಾರದು ಅಂದ್ರೆ ರಾಜ್ಯೋತ್ಸವ ಅನ್ನೋದು ನವೆಂಬರ್ ಮಾಸಕ್ಕೆ ಸೀಮಿತವಾಗದೆ, ಕನ್ನಡ ಬಳಕೆ, ಕನ್ನಡದ ಬಗೆಗಿನ ಕಾಳಜಿಯ ಮೂಲಕ ನಿತ್ಯೋತ್ಸವ ಆಗಬೇಕು...ಆಗಲೇ ನಮ್ಮ ಕನ್ನಡ ಉಳಿದೀತೂ, ಕೊಂಚ ಬೆಳೆದೀತೂ... ! 

ಒಪ್ಪ್ಕೋತೀರಾ ??

Saturday, October 23, 2010

ಹತ್ತಿ ಉರಿತಾ ಇರೋ ದೇಶ ....ತಣ್ಣಗೆ ಕೂತ್ಕೊಂಡು ತಮಾಷೆ ನೋಡೋ ಜನ.

"ನಾವು ( ಅಂದ್ರೆ ಭಾರತೀಯರು ) ಯಾಕೆ ಹೀಗೆ ?" ಅನ್ನೋ ಪ್ರಶ್ನೆನಾ ನಾನು ಪದೇ ಪದೇ ನನಗೆ ನಾನೇ ಕೇಳ್ಕೊಳ್ತಾ ಇರ್ತೀನಿ. ಸ್ವಾತಂತ್ರ್ಯ ಸಿಕ್ಕಿ ೬೦ ವರ್ಷಗಳಾದರೂ "ಸಧ್ೃಡ ಹಾಗೂ ಶಕ್ತಿಶಾಲಿ ಭಾರತ" ಅನ್ನೋ ಒಂದು ರಾಷ್ಟ್ರದ ಕಲ್ಪನೆಯಿಂದ ನಮ್ಮನ್ನು ನಾವು ಯಾಕೆ ದೂರ ಇಟ್ಕೊಂಡ್ ಇದ್ದೀವಿ ಅನ್ನೋ ಪ್ರಶ್ನೆಗೆ ನನ್ನ ಬಳಿ ಸರಿಯಾದ ಉತ್ತರ ಇನ್ನೂ ಇಲ್ಲ. 

ಕಳ್ಳತನ, ಸುಲಿಗೆ, ದರೋಡೆ , ಅತ್ಯಾಚಾರ, ಭ್ರಷ್ಟಾಚಾರ ಪ್ರಕರಣಗಳು ಹಾಗಿರಲಿ ದೇಶದ ಐಕ್ಯತೆ ಹಾಗೂ ಸಮಗ್ರತೆಯ ವಿಷಯದಲ್ಲೂ ಗಂಭೀರತೆಯನ್ನು ತೋರಿಸೋವ್ರಲ್ಲ ನಾವು !  ಶತ್ರು ಪಡೆಗಳು ಸರ್ವ ಮಾರ್ಗದಲ್ಲೂ ನಮ್ಮ ಮೇಲೆ ಕತ್ತಿ 
ಮಸೆಯುತ್ತಿದ್ದರೆ ಹೇಡಿಗಳಂತೆ ಕೈಕಟ್ಟಿ ಕುಳಿತಿರೋವ್ರು ನಾವು. ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿ , ಅವರ ಮೇಲಿನ ಆರೋಪ ಸಾಬೀತಾಗಿ , ಶಿಕ್ಷೆಗೆ ಗುರಿಯಾಗಿರುವವರನ್ನು ನೇಣುಗಂಬಕ್ಕೆ ಏರಿಸಬೇಕೋ ಬೇಡವೋ ಎಂದು ಚಿಂತಿಸುವ ಅಸಹಾಯಕರು ನಾವು !  ನೋಡಿ .. ನಮ್ಮ ಅಮಾಯಕ ನಾಗರೀಕರು, ಸೈನಿಕರು , ಪೊಲೀಸರು ಹತ್ಯೆಯಾದಾಗ ಎಲ್ಲಿಯೂ ಕಾಣಸಿಗದ ಮಾನವ ಹಕ್ಕುಗಳ ಪ್ರತಿಪಾದಕರು ಅದ್ ಹೇಗೋ ಕೈದಿಗಳಿಗೆ, ನಕ್ಸಲರಿಗೆ , ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ ಉಗ್ರಗಾಮಿಗಳಿಗೆ ಸೂಜಿ ಚುಚ್ಚಿದರೂ ಬೊಬ್ಬೇ ಹಾಕುತ್ತಾರೆ . ಹೆಚ್ಚಾಗಿ ವಿದೇಶಿ ಮೂಲದ ಹಣದಿಂದ ನಡೀತಾ ಇರೋ ನಮ್ಮ ಮಾಧ್ಯಮಗಳು ( ಅದರಲ್ಲೂ ಆಂಗ್ಲ ಟಿವಿ ನ್ಯೂಸ್ ಚಾನೆಲ್‌ಗಳು ) ಇಂತಹವರಿಗೆ ಪುಕ್ಕಟ್ಟೆ ಪ್ರಚಾರವನ್ನೂ ನೀಡುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ , ವಾಕ್ ಸ್ವಾತಂತ್ರ್ಯ ಎಂದು ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ಸಮರ್ಥಿಸಿ , ದೇಶದ ಹಿತಾಸಕ್ತಿಯ ಪರವಾಗಿ ಮಾತಾಡೋ ಜನರನ್ನೇ ಖಳ ನಾಯಕರಂತೆ ಪ್ರತಿಬಿಂಬಿಸಿಬಿಡುತ್ತವೆ. ಆದರೂ ಇದನೆಲ್ಲಾ ಬೇಜಾರಿಲ್ಲದೇ ಸಹಿಸಿಕೊಳ್ಳೋವ್ರು ನಾವು ! 


ಹೀಗೆ ಮೊನ್ನೆ ದೆಹಲಿಯಲ್ಲಿ "ಸ್ವಾತಂತ್ರ್ಯವೊಂದೇ ಉತ್ತರ" ["Azadi is the only Solution"] ಎಂಬ ತಲೆ ಬರಹದಡಿ ನಮ್ಮ ದೇಶದ ದೊಡ್ಡ ದೊಡ್ಡ ತಲೆ ಹರಟೆಗಳು ಸಮಾವೇಷವೊಂದನ್ನು ಮಾಡಿದ್ದಾರೆ. ಪ್ರತ್ಯೇಕ ಕಾಶ್ಮೀರ ರಾಷ್ಟ್ರದ ಕನಸು ಕಾಣೋ ಹುರ್ರಿಯತ್ ಕಾನ್ಫರೆನ್ಸ್ , ಖಲಿಸ್ತಾನ್ ಬೆಂಬಲಿಗರು , ನಕ್ಸಲರ ಜೊತೆಯಲ್ಲಿ ಗುರುತಿಸಿಕೊಳ್ಳುವ ಹಾಗೂ ಕೆಲವರಿಂದ ಬುದ್ಧಿ ಜೀವಿಗಳೆಂದು ಕರೆಸಿಕೊಳ್ಳೋ ಜನರು ಇದರಲ್ಲಿ ಭಾಗವಹಿಸಿದ್ದಾರೆ. ಈ ಮೇಧಾವಿಗಳು, ಸಮಾವೇಶದಲ್ಲಿ ಭಾರತದ ಸಂವಿಧಾನವನ್ನು ಸಾರ ಸಗಟಾಗಿ ತಿರಸ್ಕರಿಸಿದ್ದಾರೆ. ಸ್ವಾತಂತ್ರ್ಯ ಪಡೆಯೋ ವಿಚಾರದಲ್ಲಿ ರಾಜಿಯೇ ಇಲ್ಲ ಎಂದು ಘೋಷಿಸಿದ್ದಾರೆ. ಕಾಶ್ಮೀರದಲ್ಲಿ ಪಾಕಿ ಬಾವುಟ ಹಾರಿಸಿದ್ದು, ತ್ರಿವರ್ಣವನ್ನು ಸುಟ್ಟಿದ್ದು, ಸಶಸ್ತ್ರ ಪಡೆಗಳ ಮೇಲೆ ಕಲ್ಲು ತೂರಿದ್ದು, ಭಾನುವಾರದ ಬದಲಿಗೆ ಶುಕ್ರವಾರವನ್ನು ರಜೆಯಾನ್ನಾಗಿ ಘೋಷಿಸಿದ್ದು ... ಇತ್ಯಾದಿಗಳು ಯಾವ ರೀತಿಯಲ್ಲೂ ತಪ್ಪೇ ಅಲ್ಲ ಎಂಬ ಸಂದೇಶ ನೀಡಿ ದರ್ಪ ಮೆರೆದಿದ್ದಾರೆ. ಕೆಲ ಕಾಲದಿಂದ  ಕೆಲಸವಿಲ್ಲದೇ ಮತಿ ಭ್ರಮಣೆಗೊಳಗಾಗಿರೋ , ನಕ್ಸಲರನ್ನು ತನ್ನ ಆರಾಧ್ಯ ದೈವರಂತೆ ಕಾಣೋ ಅರುಂಧತಿ ರಾಯ್ ಅಂತಹ ಜನರೂ ಈ ದೇಶವಿರೋಧಿ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಬೆಂಬಲ ಹಾಗೂ ಅನುಕಂಪವನ್ನು ಧಾರಾಳವಾಗಿ ನೀಡಿದ್ದಾರೆ. 

ಇಷ್ಟೆಲ್ಲಾ ನಮ್ಮ ಕೇಂದ್ರ ಗೃಹ ಸಚಿವಾಲಯ ಹಾಗೂ ಸಂಸತ್ತಿನ ಬಳಿಯೇ ನಡೆದಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಕಮಕ್ ಕಿಮಕ್ ಅನ್ನದೇ ಬಾಯ್ಮುಚ್ಚಿ ಕುಳಿತಿವೆ. ಇನ್ನು ನಾವೋ...ಹೇಳೋದೇ ಬೇಡ...ಎಂದಿನಂತೆ ನನ್ನ ಕೆಲಸ, ನನ್ನ ಸಂಬಳ, ನನ್ನ ಮನೆ, ಹೆಂಡತಿ, ಮಕ್ಕಳು ಎಂಬ ಸ್ವಯಂ ಕೇಂದ್ರೀಕೃತ ವಿಷಯಗಳಲ್ಲೇ ಪುರುಸೊತ್ತಿಲ್ಲ...ದೇಶ ಯಾವೋನ್ಗೆ ಬೇಕು ಅನ್ನೋ ಆಲಸ್ಯ, ತಾತ್ಸಾರದ ಮನೋಭಾವ !

ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಸಹಸ್ರಾರು ತ್ಯಾಗ ಬಲಿದಾನಗಳಿವೆ ಎಂಬುದನ್ನು ನಾವೇಕೆ ಮರೆತ್ತಿದ್ದೆವೆ ? ಗಾಂಧೀಯಂತಹ ಶಾಂತಿ ಪ್ರಿಯನ ಜೊತೆ ಸುಭಾಷ್, ಸರ್ದಾರ್ ಪಟೇಲರಂತಹ ಉಕ್ಕಿನ ಮನುಷ್ಯರನ್ನೂನಮ್ಮ ದೇಶ ನಮಗೆ ನೀಡಿಲ್ಲವೇ ? ಹಾಗಾದ್ರೆ ಯಾಕೆ ಈ ಹೇಡಿತನ ? ಯಾಕೆ ಈ ನಪುಂಸಕತ್ವದ ಪ್ರದರ್ಶನ ? ನಾನು ಮೊದಲೇ ಹೇಳಿದಂತೆ ನನ್ನ ಬಳಿ ಇದಕ್ಕೆ ಸರಿಯಾದ ಉತ್ತರವಿಲ್ಲ !!

ನಮ್ಮ ಭಾರತ ಮಾತೆಗಾಗಿ, ಭಾರತದ ಏಳಿಗೆಗಾಗಿ, ಹಾಗೂ ಭಾರತೀಯರಿಗಾಗಿ, ರಾಜಕೀಯ ಇಚ್ಛಾಶಕ್ತಿ, ಶಕ್ತ ಪ್ರಧಾನಿ , ವೋಟ್ಬ್ಯಾಂಕ್ ರಹಿತ ರಾಜಕಾರಣ , ಎಲ್ಲಕ್ಕಿಂತ ಹೆಚ್ಚಾಗಿ ಎಚ್ಚೆತ್ತ ನಾಗರೀಕರು , ದೇಶಾಭಿಮಾನಿಗಳು ಎಂದಿಗಿಂತಲೂ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬೇಕು..ಇಲ್ಲ ಅಂದ್ರೆ ನಮ್ಮ ಭಾರತ ಕೆಲವೇ ವರ್ಷಗಳಲ್ಲಿ ತುಂಡು ತುಂಡಾಗೋಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ ?

ತಮಾಷೆ ನೋಡಿದ್ದು ಸಾಕು ಇನ್ನು..ಮೈಚಳಿ ಬಿಟ್ಟು ನಿದ್ದೆಯಿಂದ ಎಳೋಣ್ವೆ ??
Image from : Google Images

Saturday, October 16, 2010

ಮನೆಗೆಲಸವೆಂಬ ಮಹತ್ಕಾರ್ಯ !!

" ದೋಸೆ ಅಂದ್ರೆ ಎಲ್ರಿಗೂ ಇಷ್ಟ .. ಸರಿ ಹಾಗಿದ್ರೆ ಇವತ್ತು ಅಕ್ಕಿ ನೆನಸಿ ನಾಳೆ ಹಿಟ್ಟನ್ನು ರುಬ್ಬಿ ನಾಡಿದ್ದು ತಿಂಡಿ ಗೆ ದೋಸೆ ಮಾಡಿದ್ರಾಯ್ತು. ಕಿಟಕಿ, ಅಟ್ಟ ಕ್ಲೀನ್ ಮಾಡಿ ೨-೩ ತಿಂಗಳು ಆಯ್ತು ಸರಿ ನಾಳೆ ಮನೆ ಕೆಲಸ ಬೇಗ ಮುಗ್ಸಿ ಅದನ್ನು ಮಾಡ್ತೀನಿ.  ಈ ಶನಿವಾರ ಕೈ ತೋಟದಲ್ಲಿ ಸ್ವಲ್ಪ ಸಮಯ ಕಳೀಬೇಕು ಹೊಸ ೩-೪ ಗಿಡಗಳನ್ನು ಹಾಕ್ಬೇಕು .. ಮಳೆಗಾಲ ಹತ್ರ ಬರ್ತಾ ಇದೆ ತಡ ಮಾಡೋದು ಬೇಡ. ಮುಂದಿನ ವಾರ ಹಬ್ಬಕ್ಕೆ ಮನೆಗೆ ಜನ ಬರ್ತಾರೆ .. ಕಿರಾಣಿ ಸಾಮಾನುಗಳನ್ನು ಆದಷ್ಟು ಬೇಗ
ತರಬೇಕು."

ಈ ತರಹ ಹೇಳ್ತಾ ಹೋದ್ರೆ ಕೊನೆನೇ ಇರೋದಿಲ್ಲ ಅನ್ಸತ್ತೆ . ಇದು ದಿನ ನಿತ್ಯ ನಮ್ಮ ಅಮ್ಮಂದಿರು , ಇಡೀ ಪ್ರಪಂಚವೇ ಮೆಚ್ಚೋ ನಮ್ಮ ಕುಟುಂಬ ವ್ಯವಸ್ಥೆಯ ನೊಗ ಹೊರೋ ನಮ್ಮ ಗೃಹಿಣಿಯರು ಹೇಗೆ ಯೋಚನೆ ಮಾಡ್ತಾ ಇರ್ತಾರೆ ಅನ್ನೋದರ ಒಂದು ಸ್ಯಾಂಪಲ್ಲು. ನನ್ನ ಪ್ರಕಾರ ಜಗತ್ತಿನಲ್ಲಿ ಯಾವುದೇ ಸಂಬಳ, ಪ್ರಮೋಷನ್ ನ ಅಪೇಕ್ಷೆ ಇಲ್ಲದೇ ಇರೋ ಒಂದ್ ಕೆಲಸ ಅಂದ್ರೆ ಈ ಮನೆಗೆಲಸವೇ !  ಆದ್ರೂ ನೋಡಿ ಒಂದು ದಿನಾನೂ ಆಯಾಸ ಇಲ್ಲದೇ, ಪ್ರೀತಿ, ಕಾಳಜಿಗಳು ಕೊಂಚವೂ ಕಮ್ಮಿ ಆಗದಂತೆ ವರ್ಷದ ೩೬೫ ದಿನವೂ ( ಭಾನುವಾರ, ಸರ್ಕಾರಿ ರಜಗಳು ಎಲ್ಲಿರತ್ವೆ ? ) ನಿರಂತರವಾಗಿ ಸಂಸಾರದ ರಥ ನಡೆಸೋದ್ರಲ್ಲಿ ನಮ್ಮ ಅಮ್ಮಂದಿರು / ಗೃಹಿಣಿಯರು ಯಾವತ್ತೂ ಹಿಂದೆ ಬಿದ್ದೋವ್ರಲ್ಲ. ಆ ತ್ಯಾಗ, ಪ್ರೀತಿ ತುಂಬಿದ ಸೇವೆಗೆ ಕೃತಜ್ಞತೆ ಹೇಗೆ ಸಲ್ಲಿಸೋದಪ್ಪ ಅಂತ ಯೋಚಿಸ್ತಾ ಇದ್ದ ಹಾಗೆ ಮನಸ್ಸು ಹಾಗೆ ಸೆಂಟಿಮೆಂಟಲ್ ಆಗ್ಬಿಡತ್ತೆ...
"ಹೋಗ್ಲಿ ಬಿಟ್ ಹಾಕ್" ಮಾಡ್ಲೆಬೇಕಾಗುತ್ತೆ.


ಈ ಐಟಿ , ಬಿಟಿ ಇತರೆ ಬಹುರಾಷ್ಟ್ರೀಯ ಕಂಪನಿಗಳು ನಮ್ಮ್ ದೇಶಕ್ಕೆ ಬಂದು ಬೇರೆ ಎನ್ ಆಯ್ತೋ ಗೊತ್ತಿಲ್ಲ ಆದ್ರೆ ನಮ್ಮ ಹುಡುಗ್ರು ಸ್ವಲ್ಪ ಮಟ್ಟಿಗಾದ್ರೂ ಮನೆ ಕೆಲಸ ಕಲಿತುಕೊಳ್ಳೋ ಹಾಗೆ ಆಯ್ತು ( ಪಟ್ಟಣದಲ್ಲಿ ಅಮ್ಮ ಎಲ್ಲಿರ್ತಾಳೆ ? ಕೆಲಸದವಳು ಏನೇ ಅಂದ್ರೂ ಮಾಡೋದು ಅಷ್ಟಕ್ಕಷ್ಟೇ. ) ಕಲಿತುಕೊಳ್ಳೋ ಜೊತೆಗೆ ಮನೆಗೆಲಸಕ್ಕೂ ಸ್ವಲ್ಪ ಗೌರವ ಕೊಡೋಕ್ಕೆ ಶುರು ಮಾಡಿದ್ರು. ಬೆವರು ಹರಿಸೋದು ಅಂದ್ರೆ ಸುಮ್ನೇನಾ ? ವಿದ್ಯೆ, ಬುದ್ದಿ ಜೊತೆಗೆ ಒಳ್ಳೇ ಕೆಲಸಗಳಲ್ಲಿರುವ ಇಂದಿನ ಹುಡುಗೀರನ್ನು ನೋಡ್ಕೊಂಡು ಹುಡುಗ್ರೂ ಎರಡೂ ಕ್ಷೇತ್ರಗಳಲ್ಲಿ ತಮ್ಮ ಅರ್ಹತೆಯನ್ನು ತೋರ್‌ಸ್ಕೊಳ್ಳಲೇಬೇಕು. ಒಂದ್ ರೀತಿಯಲ್ಲಿ ತಮ್ಮ ಕಾಲ ಮೇಲೆ ತಾವೇ ಸಂಪೂರ್ಣವಾಗಿ ನಿಂತ್ಕೋಬೇಕು ಅನ್ನೋ ಪರಿಸ್ಥಿತಿನೂ ಇದೆ...ಹೌದು ಕಾಲ ಬದಲಾಗ್ತ ಇದೆ , ಜನ ಬದಲಾಗ್ತ ಇದ್ದಾರೆ , "ಹೌಸ್ ವೈಫ್" ಹೋಗಿ "ಹೋಮ್ ಮೇಕರ್"  ಪದದ ಬಳಕೆ ಹೆಚ್ಚಾಗಿದೆ... ಹಾಗೆಯೇ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾದ ಈ ಮನೆಗೆಲಸಕ್ಕೆ + ಮನೆಗೆಲಸ ಮಾಡೋ ಜನರ ಬಗ್ಗೆ ಸ್ವಲ್ಪ ಮರ್ಯಾದೇನೂ ಜಾಸ್ತಿ ಆಗ್ಲಿ .. ಏನ್ ಅಂತೀರಾ ?

ಮುಂದಿನ ಸಲ "ಅಡಿಗೆ, ಪಾತ್ರೆ , ಬಟ್ಟೆ , ನೆಲ-ಕಸ ಇಷ್ಟು ಮಾಡಿದ್ರೆ ಆಗ್ ಹೋಯ್ತು ಮನೆ ಕೆಲ್ಸಾ" ಅನ್ನೋ ಮುಂಚೆ ಸ್ವಲ್ಪ 
ಯೋಚಿಸ್ತೀರಾ ?

ಪಿಸು : ಅಂದ ಹಾಗೆ ಯಾಕೆ ಇಷ್ಟೆಲ್ಲಾ ಪುರಾಣ , ನೀತಿ ಪಾಠ ಅಂತೀರಾ ? ಈಗ ತಾನೇ ವಾಷ್ ಬೇಸಿನ್ ತುಂಬಾ 
ತುಂಬ್ಕೊಂಡಿದ್ದ ಪಾತ್ರೆಗಳನ್ನು ತೊಳೆದು ಬರ್ತಾ ಇದ್ದೀನಿ...ಕಷ್ಟ, ಸುಖ ನಿಮ್ಮ್ ಜೊತೆ ಹಂಚ್ಕೊಳ್ಳೋದು ಬೇಡ್ವೆ ?? :)
Image From: Google Images

Saturday, October 9, 2010

ದಾರಿ ಬಿಡ್ರೋ..

"ದಾರಿಗಾಗಿ ಧ್ವನಿ ಮಾಡಿ" ಈ ಬೋರ್ಡ್ ಅನ್ನು ನಾವು ಎಷ್ಟು ಲಾರಿ, ಬಸ್ಸುಗಳ ಹಿಂದೆ ನೋಡಿಲ್ಲ ? ಕಾರು, ದ್ವಿಚಕ್ರ ವಾಹನಗಳ ಹಿಂದೆ ಈ ಥರಾ ಬೋರ್ಡ್ ಇಲ್ಲ ಅಂದ್ರೂ ಹಾರ್ನ್ ಮಾಡಿದ್ರೆ ದಾರಿ ಬಿಡಬೇಕು ಅನ್ನೋದು ಸಾಮಾನ್ಯ ಜ್ಞಾನ ಅಲ್ಲವೇ ? ಅದೇಕೋ ಏನೋ ನೋಡಿ ನಮ್ಮ ದೇಶದಲ್ಲಿ ಬೇರೆ ಯಾವದಕ್ಕೆ ಇಲ್ಲ ಅಂದ್ರೂ ಈ ಆಂಬ್ಯುಲೆನ್ಸ್ , ಅಗ್ನಿಶಾಮಕ ವಾಹನಗಳಿಗೆ ಜಪ್ಪಯ್ಯ ಅಂದ್ರು ದಾರಿ ಬಿಡೋವ್ರಲ್ಲ ನಾವು !! 'ಸುಮ್ನೇ ಸೈರನ್ ಹೊಡ್ಕೋತಾ ಇದೆ..ಹೋಡ್‌ಕೊಳ್ಲಿ ಬಿಡು' ಅನ್ನೋ ಮನೋಭಾವ.... ಇಲ್ಲ ಅಂದ್ರೆ 'ನನ್ ಗಂಟೇನ್ ಹೋಗೋದು ?' ಅನ್ನೋ ಉತ್ತರ .... ಅಯ್ಯೋ ಪಾಪ ಅನ್ನೋ ಒಂದಿಬ್ಬರು ಅತ್ತ ಇತ್ತ ನೋಡ್ತಾರೆ ...ಹೆಚ್ಚಿಗೆ ಅಂದ್ರೆ ಮುಖ ಸಣ್ಣದು ಮಾಡ್ಕೊಂಡು ಕೊರಗ್ತಾರೆ....ಅದಕ್ಕೆ ಆಂಬ್ಯುಲೆನ್ಸ್ ನಲ್ಲಿರೋ ರೋಗಿನ ಅಥವಾ ಹತ್ತಿ ಉರಿತಾ ಇರೋ ಮನೆಯನ್ನ್ ಆ ದೇವರೇ ಕಾಪಡ್ಬೇಕು ಅಂತ ನಿಮಗನ್ನಿಸಿದ್ರೆ ಅದ್ರಲ್ಲಿ ಆಶ್ಚರ್ಯ ಏನು ಇಲ್ಲ ಬಿಡಿ.

ಸರಿ ಇಲ್ಲಿ ಕೇಳಿ....ಮತ್ತೊಮ್ಮೆ ಅಮೇರಿಕದ ಒಂದು ಒಳ್ಳೇ ವ್ಯವಸ್ಥೆ ಬಗ್ಗೆ ಹೇಳ್ತೀನಿ. ಜನ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಿಗೆ ಹೇಗೆ ಮರ್ಯಾದೆ ಕೊಡ್ತಾರೆ ಅನ್ನೋದನ್ನು ನೋಡಿದ್ರೆ ಸಾಕು ಇಲ್ಲಿನ ಜನರಿಗೆ ಕಾನೂನಿನಲ್ಲಿ ಇರೋ ಭಯ, ಸಾಮಾಜಿಕ ಕಾಳಜಿ, ಶಿಸ್ತು ಪಾಲನೆ ಬಗ್ಗೆ ನಮಗೆ ಅರಿವಾಗುತ್ತೆ. ಛೇ ನಮ್ಮ ದೇಶದಲ್ಲೂ ಈ ರೀತಿ ಇದ್ರೆ ಅನ್ನೋ ಯೋಚನೆ ತಕ್ಷಣ ಮನಸ್ಸಿಗೆ ಬರತ್ತೆ. 'ಸರಕಾರಗಳೇ ಸರಿಯಾಗಿ ಉಳಿಯೋಲ್ಲ ಇನ್ನು ಜನ ಸಾಮಾನ್ಯನ ಜೀವಕ್ಕೇನು ಕಿಮ್ಮತ್ತು' ಅನ್ನೋ ಅಪ್ರಸ್ತುತ, ಅಸಹಾಯಕ ಭಾವನೆಗಳ ಜೊತೆ  "ವ್ಯವಸ್ಥೆ ಎಲ್ಲಿ ಬದಲಾಗುತ್ತೆ ??" ಅಂತ ಕೈ ಚೆಲ್ಲಿ ಕುಳಿತ ಆಮ್ ಆದ್ಮಿಗಿಂತ ಭಿನ್ನ 
ಏನಲ್ಲ ನಾನು!....ಅಂತಾನೂ ಅನ್ಸತ್ತೆ.

ಹೋಗ್ಲಿ ಅದೇನು ವ್ಯವಸ್ಥೆ ಹೇಳಪ್ಪಾ ಅಂತ ನೀವು ಕೇಳ್ತಾ ಇದ್ರೆ...ತಕ್ಕೊಳ್ಳಿ...ಇದು ತುಂಬಾ ಸರಳ...ರಸ್ತೆಯ ಮೇಲೆ ನೀವು ಹೋಗ್ತಾ ಇರಬೇಕಾದ್ರೆ ಆಂಬ್ಯುಲೆನ್ಸ್ ಅಥವಾ ಅಗ್ನಿಶಾಮಕ ವಾಹನದ ಸೈರನ್ ಕೇಳಿದ್ರೆ ತಕ್ಷಣ ಅವ್ರಿಗೆ / ಅದಕ್ಕೆ ನೀವು ಜಾಗ ಬಿಡಬೇಕು. ರಸ್ತೆಯ ಗರಿಷ್ಟ ಬಲಗಡೆಗೆ ಹೋಗಿ ಆ ತುರ್ತು ಸೇವೆಯ ವಾಹನಗಳು ಮುಂದೆ ಹೋಗೋ ವರೆಗೂ ತಾಳ್ಮೆಯಿಂದ ಕಾದಿದ್ದು ನಂತರ ಚಲಿಸಬೇಕು. ಯಾವದೇ ಕಾರಣಕ್ಕೂ ಜಂಕ್ಷನ್‌ಗಳನ್ನು ಬ್ಲಾಕ್ ಮಾಡಬಾರದು. ಅಪಘಾತ ನಡೆದಿರುವ ಸ್ಥಳದಲ್ಲೋ ಅಥವಾ ಅಗ್ನಿ ಅನಾಹುತ ಸಂಭವಿಸಿರುವ ಜಾಗದಲ್ಲೋ ನಿಂತು ತುರ್ತು ಕಾರ್ಯಾಚರಣೆಗಳಿಗೆ ಅಡ್ಡಿ ಉಂಟುಮಾಡಬಾರದು . 

ಇನ್ನು ಹೆಚ್ಚೇನು ಹೇಳೋದಿಲ್ಲ...ಯಾಕಂದ್ರೆ ಹೆಚ್ಚೇನೂ ಉಳಿದಿಲ್ಲ....ಇಲ್ಲಿನ ಜನ ಕಾನೂನಿಗೆ ಗೌರವ ಕೊಟ್ಟು ಅದನ್ನು ಪಾಲಿಸುತ್ತಾರೆ ಅನ್ನೊದೇ ದೊಡ್ಡ ವಿಷಯ. ಜೊತೆಗೆ ಸ್ವಲ್ಪ ಒಳ್ಳೆಯತನ ಮೆರೀತಾರೆ ...  ಒಂದು ಜೀವ ಉಳಿಸೋ / ದೊಡ್ಡ ಅನಾಹುತ ತಪ್ಪಿಸುವ ಕಾರ್ಯಕ್ಕೆ ಅವರದೇ ಆದ ರೀತಿಯಲ್ಲಿ ನೆರವಾಗ್‌ತಾರೆ...
ಮುಂದಿನ ಸಲ ರಸ್ತೆಗಿಳಿದಾಗ ನಾವೂ ನಮ್ಮ ಜವಾಬ್ದಾರಿ ಅರಿತುಕೊಂಡು ಈ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗೋಣ್ವೇ?

ಪಿಸು : ಗೂಗಲ್ ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಇದು ( http://www.karnataka.com/driving-manual/ ) 
ಸಿಕ್ತು . ಸಮಯ ಇದ್ದಾಗ ಹಾಗೆ ಓದಿ....
ಚಿತ್ರ ಕೃಪೆ  ( Image from ) : Google Images